ಗುರುದೇವತಾ ಭಜನಮಂಜರೀ

ಅಮರ ವರ್ಗಕೆ ಅಭಯ

ಘೋಷಃ

ಅವಧೂತ ಚಿಂತನ ಶ್ರೀಗುರುದೇವ ದತ್ತ

ಶ್ಲೋಕಃ

ದತ್ತಾತ್ರೇಯಪದಾಬ್ಜಂ
ವಿತ್ತಾಧೀಶಾದಿದೇವವರ್ಯೇಡ್ಯಮ್ |
ಹೃತ್ತಾಪಹಾರಚತುರಂ
ಚಿತ್ತಾಮಲಭಾವಸಿದ್ಧಯೇ ನೌಮಿ ||

ಕೀರ್ತನಮ್ — 3

ಅಮರ ವರ್ಗಕೆ ಅಭಯ ಸಾರಿದಿ
ಮೂಲ ಸದ್ಗುರು ಪೀಠ ನಿಲಿಸಿದಿ |
ಅನಸೂಯಾ ಸುತಾ ನೀ ತ್ರಿಮೂರುತಿ
ಅತ್ರಿನಂದನಾ ದತ್ತ ಮೂರುತಿ ||

ಪಿಠಾಪುರದೊಳು ಮೈಯ್ಯ ತೋರ್ದವ
ಕುರುವಪುರದೊಳು ನೆಲಸಿನಿಂತವ |
ಯೋಗಿರಾಜ ಶ್ರೀಪಾದ ಗುರುಪತೀ
ಅತ್ರಿನಂದನಾ ದತ್ತ ಮೂರುತಿ ||

ಅಂಬೆ ಮಾಧವ ತನಯ ನರಹರೀ
ಕ್ಷೇತ್ರ ನಿನ್ನದು ಗಾಣಗಾಪುರೀ |
ಯತಿಪತೀ ನರಸಿಂಹಸರಸ್ವತೀ
ಅತ್ರಿನಂದನಾ ದತ್ತ ಮೂರುತಿ ||

ರಾಯರಂಕರು ನಿನ್ನ ದಾಸರು
ಬಡವ ಬಲ್ಲಿದರೆಲ್ಲ ಭಕ್ತರು |
ಸರ್ವಶಕ್ತ ನೀ ಜ್ಞಾನಿಕುಲಪತೀ
ಅತ್ರಿನಂದನಾ ದತ್ತ ಮೂರುತಿ ||

ನಿನ್ನ ಚರಿತೆಯೂ ವೇದ ಸಮಬಲ
ನಿನ್ನುಪಾಸನಾ ಸುಖದ ಸವಿ ಫಲಾ |
ಸರ್ವಜನರಿಗೂ ನೀನೆ ಸದ್ಗತಿ
ಅತ್ರಿನಂದನಾ ದತ್ತ ಮೂರುತಿ ||

ಯೋಗಿ ವೇಷವೋ ಭೋಗಿ ವೇಷವೋ
ಕಂಡ ಭಕ್ತರದೆಂಥ ಭಾಗ್ಯವೋ |
ಮನಕೆನಿಲುಕದಾ ಮಧುರಮಯಚಿತೀ
ಅತ್ರಿನಂದನಾ ದತ್ತ ಮೂರುತಿ ||

ಆರು ಕೈಗಳು ಮೂರು ಮಸ್ತಕ
ಎರಡು ಕೈಗಳು ಒಂದೆಯೇ ಮುಖಾ |
ತ್ರಿಗುಣದೆರಕನೀ ವಿಶ್ವದಾಕೃತೀ
ಅತ್ರಿನಂದನಾ ದತ್ತ ಮೂರುತಿ ||

ಕರ್ಮವೆಲ್ಲವೂ ನಿನ್ನುಪಾಸನಾ
ಭೋಗವೆಲ್ಲವೂ ನಿನ್ನಭಾವನಾ |
ನೀಡು ನಿನ್ನೊಳು ಏಕರಸಮತಿ
ಅತ್ರಿನಂದನಾ ದತ್ತ ಮೂರುತಿ ||

ಒಂದರೆಕ್ಷಣಾ ನಿತ್ಯ ಸ್ಮರಣೆಯಾ
ಗೈವಭಾವಿಕಾ ನಿತ್ಯನಿರ್ಭಯ |
ಸೊಲ್ಲು ಸೊಲ್ಲಿಗೂ ನಿನ್ನಕೀರುತೀ
ಹಾಡಿಕೊಳ್ಳಲಿ ಯೋಗೀಶ ಭಾರತೀ ||

ನಾಮಾವಲಿಃ

ದತ್ತಗುರೋ ಜಯ ದತ್ತಗುರೋ
ದತ್ತಾತ್ರೇಯಾವಧೂತ ಗುರೋ |

ಘೋಷಃ

ಅವಧೂತ ಚಿಂತನ ಶ್ರೀಗುರುದೇವ ದತ್ತ