ಗುರುದೇವತಾ ಭಜನಮಂಜರೀ

ಶಿವರಾತ್ರಿ ಸಾಂಗವಾಯಿತು

ಘೋಷಃ

ಹರ ನಮಃ ಪಾರ್ವತೀ ಪತಯೇ ಹರ ಹರ ಮಹಾದೇವ |

ಶ್ಲೋಕಃ

ಯೋಗಕ್ಷೇಮಧುರಂಧರಸ್ಯ ಸಕಲ­ಶ್ರೇಯಃಪ್ರದೋದ್ಯೋಗಿನೋ
ದೃಷ್ಟಾದೃಷ್ಟಮತೋಪದೇಶಕೃತಿನೋ
ಬಾಹ್ಯಾಂತರವ್ಯಾಪಿನಃ |
ಸರ್ವಜ್ಞಸ್ಯ ದಯಾಕರಸ್ಯ ಭವತಃ
ಕಿಂ ವೇದಿತವ್ಯಂ ಮಯಾ
ಶಂಭೋ ತ್ವಂ ಪರಮಾಂತರಂಗ ಇತಿ ಮೇ
ಚಿತ್ತೇ ಸ್ಮರಾಮ್ಯನ್ವಹಮ್ ||

ಕೀರ್ತನಮ್ — 6

ರಾಗಃ : ಅಹಿರಭೈರವ

ತಾಲಃ : ಆದಿ ತಿಸ್ರ ಗತಿ

ಶಿವರಾತ್ರಿ ಸಾಂಗವಾಯಿತು
ಅಲ್ಲಿರುವ ಶಿವನೊಡನೆ ಸಂಗವಾಯಿತು
ಹವನ ಬಹಿರಂಗವಾಯಿತು
ಬಾಧಿಸುವ ಶವದೇಹ ಭಂಗವಾಹಿತು ||

ಉಪವಾಸಿಯಾಗಿ ನಾನು ಬಿಡಿಸಿ
ತಂದುಪಚಾರ ಬಿಲ್ವಗಳನು
ಗುಪಿತ ಶಿವ ಮಂದಿರವನು ಸೇರಿ
ಮಂಟಪದ ಬಾಗಿಲ ತೆರೆದೆನು ||

ಸಂಗಿಸದೇ ಖಂಡದಲ್ಲಿ ಕೂಡಿ
ಬಹಿರಂಗ ಬ್ರಹ್ಮಾಂಡದಲ್ಲಿ
ಮಂಗಳಾಕಾರದಲ್ಲಿ ಬೆಳಗುತಿಹ
ಲಿಂಗವನು ಕಂಡೆನಲ್ಲಿ ||

ಪಾತಾಳ ಭುವನಗಳನು
ಗಗನಾಂಡ ಬೇತಾಳ ಭೂತಗಳನು
ಭೂತಾದಿ ಕಾಲಗಳನು ಬಳಸಿಚಿದ್‍­ಜ್ಯೋತಿ ರೂಪಾಯ್ತು ತಾನು ||

ಅಭಯವೇ ತೋರುತಿಹುದು
ಎಲ್ಲೆಲ್ಲೂ ಶುಭಮಹೋದಯವಾದುದು
ಸಭಯ ಸಂಸರ್ಗವಿರದು
ಅಮೃತದಿಂದಭಿಷೇಕವಾಗುತಿಹುದು ||

ಘಂಟೆಯನು ಬಡಿಯಲಿಲ್ಲ
ಅದು ಬಹಳ ಕಂಟಕವೇ ತೋರಿತಲ್ಲ
ಕುಂಟರೀ ನಂಟರಿಲ್ಲ ದೀಪಗಳ­ನಂಟಿಸುವನಾವನಿಲ್ಲ ||

ಗಾತ್ರವೇ ಕಾಣಲಿಲ್ಲ
ಅದರಿಂದ ಪಾತ್ರೆಗಳನ್ನಿರಿಸಲಿಲ್ಲ
ಪತ್ರೆಗವಕಾಶವಿಲ್ಲ ಶಿವನ
ಬಳಿ ರಾತ್ರಿಯೇ ತೋರಲಿಲ್ಲ ||

ಭೇದವಲ್ಲಿಲ್ಲವಾಯಿತು
ಮಂತ್ರಪಠನಾದಿಗಳು ಬೇಡವಾಯಿತು
ಪಾದವೇ ಭುವನವಾಯಿತು
ಅದರಿಂದ ಪಾದ್ಯವೇ ಶೂನ್ಯವಾಯಿತು ||

ಪಂಚಪಾತ್ರೆಗಳ ತೊರೆದೆ
ಆಗಾಮಿ ಸಂಚಿತಂಗಳನು ಕಳೆದೆ
ಪಂಚಾಮೃತವನು ಸವಿದೆ
ಹರಿಹರವಿರಿಂಚಿರೂಪವನು ತಳೆದೆ ||

ಮರಣಜನ್ಮಂಗಳಿಲ್ಲ ಮುಂದದರ
ಭರಣ ದುಃಖಂಗಳಿಲ್ಲ
ಬರುವ ತಾಪಂಗಳಿಲ್ಲ ಇದನು
ಸದ್ಗುರು ಶಂಕರಾರ್ಯ ಬಲ್ಲ ||

ನಾಮಾವಲಿಃ

ಶಂಕರ ಸದಾಶಿವ ಸಭಾಪತೇ ಮನೋಹರ
ಚಂದ್ರಶೇಖರ ಜಟಾಧರ ಉಮಾಮಹೇಶ್ವರ

ಘೋಷಃ

ಹರ ನಮಃ ಪಾರ್ವತೀ ಪತಯೇ ಹರ ಹರ ಮಹಾದೇವ |